ಹಾಲ್-ದೊಡ್-ಡೈರಿ

Thursday, August 19, 2010

ನೆನಪು ಹಳೆಯದಾದರೇನು, ಮೆಲುಕು ನವನವೀನ -8

22-08-1983; ಸೋಮವಾರ

ಗೆಳೆಯ ಚಂದ್ರಶೇಖರ್‌ನಿಂದ ದೇವಾಲಯಗಳು ಮತ್ತು ಲೈಂಗಿಕ ಶಿಲ್ಪ (ಲೇ: ತಾಪಿ ಧರ್ಮಾರಾವು) ಗ್ರಂಥವನ್ನು ಓದಲು ಪಡೆದೆ. ಪುಟ್ಟ ಗ್ರಂಥದ ಕರ್ತೃ ಆಂಧ್ರದ ಕ್ರಾಂತಿಕಾರಿ ಲೇಖಕರ ಗುಂಪಿನ ನೇತೃತ್ವ ವಹಿಸಿದ ಬಹುಮುಖ ಪ್ರತಿಭಾಶಾಲಿ, ಕವಿ, ಪಂಡಿತ, ವಿಮರ್ಶಕ, ನಾಟಕಕಾರ. ಗುಪ್ತಾಂಗಗಳ ಪೂಜೆಯನ್ನು ಸಂಶೋಧನೆಯ ಒರೆಗಲ್ಲಿಗೆ ಹಚ್ಚಿ ಈ ಕ್ರಿಯೆಗಳ ಹಿಂದಿನ ಗೂಡಾರ್ಥಗಳನ್ನು ಅರಿಯಲು ಯತ್ನಿಸಿದ್ದಾರೆ. ದೇವಾಲಯಗಳ ಸ್ಥಾಪನೆಯ ಹಿಂದಿನ ಉದ್ದೇಶ - ದೇವಾಲಯಗಳಲ್ಲಿರುವ ಲೈಂಗಿಕ ಶಿಲ್ಪಗಳ ಅಸ್ಥಿತ್ವದ ಬಗ್ಗೆ ಸರಳವಾಗಿ ಅಷ್ತೇ ಗಟ್ಟಿಯಾಗಿ ಬರೆದಿದ್ದಾರೆ.

ಅಡಿ ಟಿಪ್ಪಣಿ: ‘ರಾಮುಡು’ ಎಂದು ನಾವು ರೇಗಿಸುತ್ತಿದ್ದ ತೆಲುಗು ಸಿನಿಮಾಪ್ರಿಯ ಜಿ.ಚಂದ್ರಶೇಖರ್ ಬಿ.ಇ. ಕಲಿಕೆಯ ಸಮಯದಲ್ಲಿ ಸಹಪಾಠಿ. ಅಪರೂಪದ ಪುಸ್ತಕಗಳನ್ನು ಎರವಲು ಕೊಡುತ್ತಿದ್ದ. ನನ್ನಂತೆಯೇ ಡಿ.ಆರ್.ಡಿ.ಓ. ಸೇರಿ ಇಪ್ಪತ್ತು ವರ್ಷಗಳ ಕಾಲ ಕೊಚ್ಚಿಯ ಪ್ರಯೋಗಶಾಲೆಯಲ್ಲಿ ಕೆಲಸ ಮಾಡಿದ. ನಾನು ಮದ್ರಾಸಿನ ಐ.ಐ.ಟಿ.ಯಲ್ಲಿ ಎಂ.ಟೆಕ್. ಮಾಡುವ ಸಮಯದಲ್ಲಿಯೂ ಜತೆಗಿದ್ದ. ಪ್ರಸ್ತುತ ಬೆಂಗಳೂರಿನ ಡಿ.ಆರ್.ಡಿ.ಓ. ಪ್ರಯೋಗಶಾಲೆಯಲ್ಲಿ ಹಿರಿಯ ವಿಜ್ಞಾನಿ.

27-05-1983; ಶುಕ್ರವಾರ

ರಾಜ್‍ಕುಮಾರ್ ಮತ್ತು ಸನ್ಮಾನ ಸಮಾರಂಭಗಳು:

ರಾಜ್‍ಕುಮಾರ್ ಸ್ವಭಾವತಃ ಒಬ್ಬ ಒಳ್ಲೆಯ ನಟ, ನಿಜ. ಈ ಒಳ್ಳೆಯತನದಿಂದಲೇ ಆತ ಇಷ್ಟು ಜನಪ್ರಿಯ ನಟನಾಗಲು ಸಾಧ್ಯವಾದದ್ದು. ಆದರೆ ಇತ್ತೀಚೆಗೆ ರಾಜ್‍ಕುಮಾರ್ ಗುಂಡೂರಾಯರನ್ನೂ ಮೀರಿಸುವಷ್ಟು ಸನ್ಮಾನ ಸಮಾರಂಭಗಳಲ್ಲಿ ಭಾಗವಹಿಸುವುದು; ರಾಜ್‍ಕುಮಾರ್ ಹತ್ತಿರದ ಬಳಗದವರ ಗೂಂಡಾಗಿರಿ; ಕಟ್‍ಔಟ್‍ಗಳ ನಿರ್ಮಾಣದಲ್ಲಿ ಪೈಪೋಟಿ ನಡೆಸಿ ದಾಖಲೆ ನಿರ್ಮಿಸುತ್ತಿರುವ ಹುಚ್ಚು ಅಭಿಮಾನಿಗಳು; ರಾಜ್‍ಕುಮಾರನನ್ನು ಅಭಿನವ ಋಷ್ಯಶೃಂಗ ಎಂದು ಭಾವಿಸಿ ಪೂಜಿಸುವ ಭಕ್ತರು; ವಿಷ್ಣುವರ್ಧನನ ಮೇಲೆ ಕಲ್ಲು - ಚಪ್ಪಲಿ ತೂರುವುದು; ಅವನ ಕಟ್‍ಔಟ್‍ಗಳನ್ನು, ವಾಲ್‍ಪೋಸ್ಟ್‍ಗಳನ್ನು ಧ್ವಂಸ ಮಾಡುವುದು .... ಇತ್ಯಾದಿಗಳು ನಮ್ಮ ಸಾರ್ವಜನಿಕ ಜೀವನ ದುರಂತಕ್ಕೀಡಾಗುತ್ತಿರುವ ಸ್ಪಷ್ತ ಲಕ್ಷಣಗಳು.

ಈ ಸಿನಿಮಾ ಜನರ ಬಗ್ಗೆ ಈ ಬಗೆಯ ಅಭಿಮಾನ ‘ಹುಚ್ಚಿನ’ ಲಕ್ಷಣವಲ್ಲದೆ ಬೇರೇನೂ ಅಲ್ಲ. ಆದರೆ ಈ ಹುಚ್ಚಿಗೆ ಬಲಿಯಾದವರು ಹೆಚ್ಚಾದಾಗ ಅಪಾಯವಿದೆ. ರಾಜ್‍ಕುಮಾರನ ಲಕ್ಷಾಂತರ ಅಭಿಮಾನಿಗಳಲ್ಲಿ ದಿನಕ್ಕೆ ಹಲವಾರು ರೂಪಾಯಿಗಳನ್ನು ಸಂಪಾದಿಸುವ ಬಡಜನರೇ ಹೆಚ್ಚಿದ್ದಾರೆ - ಅದರಲ್ಲೂ ಅನಕ್ಷರಸ್ತರ ಹೆಚ್ಚು ಮಂದಿ. ಈ ಜನಗಳನ್ನು ಒಳ್ಲೆಯ ದಾರಿಗೆ ತರುವ ಶಕ್ತಿ ರಾಜ್‍ಕುಮಾರ್‌ಗೆ ಇದೆ. ಅಪಾರ ಹಣ ಮತ್ತು ಮಾನವ ಶಕ್ತಿಯನ್ನು ಹೂಮಳೆ ಸುರಿಸಿಕೊಳ್ಳುವುದಕ್ಕಾಗಿ, ಮೆರವಣಿಗೆ ಮಾಡಿಸಿಕೊಳ್ಳುವುದಕ್ಕೆ, cutoutಗಳನ್ನು ಮತ್ತು satarಗಳನ್ನು ಮಾಡುವುದಕ್ಕೆ, ಅವಕ್ಕೆ ಹಾಲು ಅಭಿಷೇಕ ಮಾಡುವುದಕ್ಕಾಗಿ ವ್ಯರ್ಥ ಮಾಡಬಾರದು. ಇದು "ತಾನೇ ದೇವರು" ಎಂದು ಭಾವಿಸುವ ಜನರೆಲ್ಲರೂ ತಮ್ಮ ಅನುಯಾಯಿಗಳನ್ನು ಕೂಪಕ್ಕೆ ತಳ್ಲುವ ದುರಂತ ರೀತಿ. ಇದರ ಬದಲು ತನ್ನ ಅಭಿಮಾನಿಗಳಿಗೆ ತಿಳಿವಳಿಕೆ ನೀಡಿ ಇದೇ ಅಪಾರ ಹಣ ಮತ್ತು ಮಾನವ ಶಕ್ತಿಯನ್ನು ಸಮಾಜ ಸೇವಾಕಾರ್ಯಗಳಿಗೆ (ಅಂಗವಿಕಲರ ಕಲ್ಯಾಣ ಕಾರ್ಯಗಳು, ಆಸ್ಪತ್ರೆ - ಶಾಲೆ ಮುಂತಾದವುಗಳಿಗೆ ಅನುದಾನ; ವಯಸ್ಕರ ಶಿಕ್ಷಣ) ವಿನಿಯೋಗಿಸಿದರೆ ಆ ದೈವತ್ವದ (ದೇವರು ಎಂಬುದೇನಾದರೂ ಇದ್ದರೆ) ಮಟ್ಟಕ್ಕೆ ರಾಜ್‍ಕುಮಾರ್ ಏರುತ್ತಾರೆ. ಇಲ್ಲದಿದ್ದರೆ ಅವರೂ ಕೂಡ ಒಬ್ಬ ಕ್ಷುಲ್ಲಕ ರಾಜಕಾರಣಿಯಂತೆ ತಾವೇ ನಾಶಗೊಂಡು ದೇಶ ಕೂಡ ಹಾಳುಗೆಡವುತ್ತಾರೆ.

ಅಡಿ ಟಿಪ್ಪಣಿ: ದಿನಚರಿಯಲ್ಲಿ ಸ್ವಾರಸ್ಯಕರ ಅಂಶಗಳೇನೂ ಇರದಿದ್ದ ಸಮಯ, ಇಂಥ ಟಿಪ್ಪಣಿಗಳನ್ನು ದಾಖಲೆ ಮಾಡುವ ಹವ್ಯಾಸ ಇತ್ತು. ಟಿಪ್ಪಣಿಯ ಶೈಲಿ ಇಂದು ನೋಡಿದರೆ, ಬಹುಶಃ ಲಂಕೇಶ್ ಪತ್ರಿಕೆಯ ಗಾಢ ಪ್ರಭಾವ ನನ್ನ ಮೇಲಾಗಿತ್ತು ಎಂದು ತೋರುತ್ತದೆ. ಲಂಕೇಶ್ ಪತ್ರಿಕೆಗಾಗಿ ಕಾದು, ಮೊದಲ ಅಕ್ಷರದಿಂದ ಕೊನೆಯ ಅಕ್ಷರದವರೆಗೆ ಓದುತ್ತಿದ್ದ ದಿನಗಳವು.

No comments: